ಭಟ್ಕಳದ ನವಾಯತ್, ಬೇರೆ ಭಾಗದ ದಖನಿಗಳು, ಗುಜರಾತಿನ ಮೆಮನ್ ಇವರೆಲ್ಲಾ ಮುಸ್ಲಿಮ್ ಸಮುದಾಯದ ಒಂದು ಅವಿಭಾಜ್ಯ ಅಂಗವಾಗಿರುವ ಹಾಗೆಯೇ, ಬ್ಯಾರಿ ಜನಾಂಗದ ಜನರು ಸ್ವಂತ ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಸಾಧಾರಣ ೧೩೦೦ ವರ್ಷಗಳಿಂದ ಈ ನೆಲದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪೋರ್ಚುಗೀಸ್ ಹಾಗೂ ಇಂಗ್ಲಿಷರ ಆಡಳಿತಕ್ಕೆ ಮೊದಲು, ಬ್ಯಾರಿ ಮುಸ್ಲಿಮರು, ಉತ್ತಮ ರೀತಿಯಲ್ಲಿ ಜೊತೆಯಾಗಿ ಕಾಸರಗೋಡಿನ ಚಂದ್ರಗಿರಿ ನದಿಯ ತೀರದಿಂದ ಕುಂದಾಪುರದ ಬಾರ್ಕೊರಿನವರೆಗೆ ಇದ್ದು ಜೀವನ ಸಾಗಿಸುತ್ತಿದ್ದರು. ಪೋರ್ಚುಗೀಸ್ ಮತ್ತು ಇಂಗ್ಲಿಷರು ಮುಸ್ಲಿಮ್ ಜನರನ್ನು ಮತಾಂತರ ಮಾಡುತ್ತಾರೆಂಬ ಹೆದರಿಕೆಯಿಂದ ಬ್ಯಾರಿಗಳಿಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡದಿರುವ ಮೂಲಕ ಜಗತ್ತಿನ ಜ್ಣಾನವನ್ನು ದೂರಮಾಡಿದ ಬ್ಯಾರಿ ನೇತಾರರು ಮತ್ತು ಧಾರ್ಮಿಕ ನೇತಾರರು ಧಾರ್ಮಿಕ ವಿದ್ಯೆಗೆ ಮಾತ್ರ ಹೆಚ್ಚಿನ ಮಹತ್ವ ಕೊಟ್ಟರು. ಹಾಗಾಗಿ ಇಂಗ್ಲಿಷರು ಭಾರತ ದೇಶದಲ್ಲಿ ತಂದ ಇಂಗ್ಲಿಷ್ ವಿದ್ಯಾಭ್ಯಾಸ ಜ್ಣಾನದ ಆಂದೋಲನದ ಫಲಿತಾಂಶ ಬ್ಯಾರಿ ಮುಸ್ಲಿಮರಿಗೆ ಸಿಗದೆ ಜಗತ್ತಿನ ಜೀವನದಲ್ಲಿ ಬಹಳಷ್ಟು ಹಿಂದೆ ಬಿದ್ದರು. ಹಾಗಾಗಿ ೧೬೦೦ನೇ ಇಸವಿಯಿಂದ ಹಿಡಿದು ೧೯೮೦ ಇಸವಿ ತನಕ ಇಂಗ್ಲಿಷ್ ವಿದ್ಯಾಭ್ಯಾಸದಲ್ಲೂ ಬ್ಯಾರಿಗಳು ತುಂಬಾ ಹಿಂದೆ ಬಿದ್ದರು.
೧೭೯೯ನೇ ಇಸವಿ ತನಕ ಹೈದರಾಲಿ ಮತ್ತು ಟಿಪ್ಪುವಿನ ಆಡಳಿತವು ಮೈಸೂರು ರಾಜ್ಯಕ್ಕೆ ಒಳಪಟ್ಟಿತ್ತು. ೧೭೯೯ನೇ ಇಸವಿಯಲ್ಲಿ ಟಿಪ್ಪು ಸುಲ್ತಾನ್ ರಣರಂಗದಲ್ಲಿ ಮೃತಪಟ್ಟಾಗ ಬ್ರಿಟಿಷರು (ಕಿನಾರ) ಕೆನರಾ ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದರು. ಆಗ ಕೆನರಾ ಜಿಲ್ಲೆ ಆಗಿನ ಮುಂಬೈ ರಾಜ್ಯಕ್ಕೆ ಸೇರಿತ್ತು. ೧೮೬೨ನೇ ಇಸವಿಯಲ್ಲಿ ಸೌತ್ ಕೆನರಾ ಜಿಲ್ಲೆ, ನಾರ್ತ್ ಕೆನರಾ ಜಿಲ್ಲೆ ಎಂಬ ಎರಡು ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದು ಕಾಸರಗೋಡು, ಮಂಗಳೂರು ಮತ್ತು ಉಡುಪಿ ಸೇರಿದ ಸೌತ್ ಕೆನರಾ ಜಿಲ್ಲೆ ಮದ್ರಾಸ್ ರಾಜ್ಯಕ್ಕೆ ಸೇರಿತು. ಅದರ ನಂತರ ೧-೧೧-೧೯೫೬ರಲ್ಲಿ ಕಾಸರಗೋಡು ಕೇರಳಕ್ಕೂ ದಕ್ಷಿಣ ಕನ್ನಡ ಉಡುಪಿ ಸೇರಿದ ಸೌತ್ ಕೆನರಾ ಜಿಲ್ಲೆ ಮೈಸೂರು (ಕರ್ನಾಟಕ) ರಾಜ್ಯಕ್ಕೆ ಸೇರಿತು. ಅದರ ನಂತರ ೧೯೯೫ರಲ್ಲಿ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂತು.
೧೯೮೦ರ ನಂತರ ಗಲ್ಫ್ ದೇಶದ ಉದ್ಯೋಗಕ್ಕಾಗಿಯೂ, ವ್ಯಾಪಾರಕ್ಕಾಗಿಯೂ ಬ್ಯಾರಿಗಳು ದೇಶದ ಹಾಗೂ ರಾಜ್ಯದ ಹೊರಗೆ ಹೋಗಿ ಜೀವನ ನಡೆಸಿದರು. ಹಾಗಾಗಿ ಈಗ ಬ್ಯಾರಿಗಳು ಕಾಸರಗೋಡಿನ ಮಂಜೇಶ್ವರ ಪ್ರದೇಶದಲ್ಲೂ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಬೆಂಗಳೂರು ಮೊದಲಾದ ಜಿಲ್ಲೆಗಳಲ್ಲೂ, ಮಹಾರಾಷ್ಟ್ರದ ಪೂನಾ, ಮುಂಬೈಯಲ್ಲೂ, ಗುಜರಾತಿನ ಪೋರಬಂದರಿನಲ್ಲೂ, ಸೌದಿ, ಕುವೈತ್ ಗಳಂತಹ ಗಲ್ಫ್ ರಾಷ್ಟ್ರಗಳಲ್ಲೂ, ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಇಂಡೋನೇಷ್ಯಾ, ಶ್ರೀಲಂಕಾ, ಚೀನಾ ಮೊದಲಾದ ರಾಷ್ಟ್ರಗಳಲ್ಲೂ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಬ್ಯಾರಿಗಳ ವ್ಯವಹಾರ ವ್ಯಾಪಾರ, ಭಾಷೆ ಈ ವಿಷಯಗಳಲ್ಲಿ ಹಾಗೂ ಸಂಸ್ಕೃತಿಯಲ್ಲಿ ತುಂಬಾ ಬದಲಾವಣೆಗಳಾದವು. ೧೬೦೦ನೇ ಇಸವಿಯಿಂದ ೧೯೮೦ನೇ ಇಸವಿ ತನಕ ಹೆಚ್ಚಿನ ಬ್ಯಾರಿಗಳ ಜೀವನವು ತುಂಬಾ ಕಷ್ಟದಲ್ಲಿತ್ತು. ವಿದ್ಯಾಭ್ಯಾಸ ಇಲ್ಲದೆ ಸರಕಾರಿ, ಅರೆ ಸರಕಾರಿ ನೌಕರಿ ಸಿಗದೆ, ವ್ಯಾಪಾರ ಮಾಡಲಾಗದೆ ಬಡತನದಲ್ಲಿ ಜೀವನ ಸಾಗಿಸುವಂತಾಯಿತು. ೧೯೮೦ರ ನಂತರ ಗಲ್ಫ್ ಉದ್ಯೋಗ ಬ್ಯಾರಿಗಳ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿತ್ತು.
೧೯೮೭ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಇದ್ದ ಬ್ಯಾರಿಗಳು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಸ್ಥಾಪನೆ ಮಾಡಿ ಬ್ಯಾರಿ ಆಂದೋಲನದಲ್ಲಿ ತೊಡಗಿದರು. ೧೯೯೭ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಬ್ಯಾರಿ ಸಮ್ಮೇಳನ ಮಾಡಿ ಬ್ಯಾರಿಗಳ ವೈಭವವನ್ನು ಬ್ಯಾರಿಗಳಿಗೂ ಬೇರೆಯವರಿಗೂ ಪರಿಚಯಿಸಿದರು. ಅದರ ನಂತರ ಮಂಗಳೂರು ಮತ್ತು ಬಂಟ್ವಾಳದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ನೇತೃತ್ವದಲ್ಲಿ ೧ನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ೨ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಿತು. ಅದರ ನಂತರ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉಡುಪಿಯಲ್ಲಿ ೩ನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಾಗೂ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ೩೦೦೭ರಲ್ಲಿ ೪ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಬ್ಯಾರಿ ಆಂದೋಲನ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಬ್ಯಾರಿ ಭಾಷೆಯಲ್ಲೂ ಕನ್ನಡ ಭಾಷೆಯಲ್ಲೂ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಪುಸ್ತಕಗಳು ಸಿ.ಡಿ ಮತ್ತು ಕ್ಯಾಸೆಟ್ ಗಳು ಪ್ರಕಟಗೊಂಡವು. ಅಖಿಲ ಭಾರತ ಬ್ಯಾರಿ ಪರಿಷತ್, ಬ್ಯಾರಿ ಕಲಾರಂಗ, ಬ್ಯಾರೀಸ್ ಕಲ್ಚರಲ್ ಪೋರಮ್, ಬ್ಯಾರೀಸ್ ವೆಲ್ಫೇರ್ ಪೋರಮ್ ಮೊದಲಾದ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ಹೆಚ್ಚಿನ ಕಾರ್ಯಕ್ರಮ ನಡೆಸಿಕೊಟ್ಟರು.
೨೦೦೬ ರಲ್ಲಿ ಚಿಕ್ಕಮಗಳೂರು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಣೆ ಮಾಡಿ ೨೦೦೭ರ ಅಕ್ಟೋಬರ್ ೩ರಂದು ಗಜೆಟ್ ನೋಟಿಫಿಕೇಶನ್ ಮಾಡಿತು. ಆದರೆ ಪ್ರಥಮ ಅಧ್ಯಕ್ಷರನ್ನಾಗಿ ಎಂ.ಬಿ ಅಬ್ದುಲ್ ರಹ್ ಮಾನ್ ರವರನ್ನು ನೇಮಕ ಮಾಡಿದ್ದು ೨೦೦೯ನೇ ಇಸವಿಯಲ್ಲಿ. ಇವರ ೩ ವರ್ಷ ಅವಧಿಯ ನಂತರ ೨ನೇ ಅಧ್ಯಕ್ಷರಾಗಿ ರಹೀಮ್ ಉಚ್ಚಿಲ್ ಇವರ ನೇಮಕ ಆಯಿತು. ಇವರ ಒಂದೂವರೆ ವರ್ಷದ ಅವಧಿಯಲ್ಲಿ ಬದಲಾವಣೆ ಆಗಿ ಅದರ ನಂತರ ೧೦ ತಿಂಗಳವರೆಗೆ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಆಗಿರಲಿಲ್ಲ.
೨೬-೨-೨೦೧೪ರಂದು ೩ನೇ ಅವಧಿಗೆ ನನ್ನನ್ನು ಅಧ್ಯಕ್ಷನನ್ನಾಗಿಯೂ ಬೇರೆ ೧೦ ಮಂದಿ ಸದಸ್ಯರನ್ನೂ ಕರ್ನಾಟಕ ಘನ ಸರಕಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೇಮಕ ಮಾಡಿತು. ಆ ಕೂಡಲೇ ಪಾರ್ಲಿಮೆಂಟ್ ಚುನಾವಣೆ ಘೋಷಣೆ ಆಗಿ ಮೇ ೧೬ನೇ ತಾರೀಕಿನವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದಾಗಿ ಜನ ಪ್ರತಿನಿಧಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡುವ ಅವಕಾಶ ಇರಲಿಲ್ಲ. ಆದರೂ ಬ್ಯಾರಿ ಸಾಹಿತ್ಯ, ಕಲೆ, ಸಂಸ್ಕೃತಿ ಭಾಶೆಯ ಬೆಳವಣಿಗೆಗೆ ಬೇಕಾದ ಕಛೇರಿ ಪತ್ರ ವ್ಯವಹಾರ, ಬೆಲ್ಕಿರಿ ದ್ವೈಮಾಸಿಕ ಪ್ರಕಟನೆ, ಬ್ಯಾರಿ ಭವನಕ್ಕೆ ಜಾಗದ ಹುಡುಕಾಟ, ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ ಬೇಕಾದ ಕೆಲಸ, ಬ್ಯಾರಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಕೆಲಸ, ಬ್ಯಾರಿ-ಕನ್ನಡ-ಇಂಗ್ಲಿಷ್ ಅರ್ಥಕೋಶವನ್ನು ತಯಾರು ಮಾಡುವ ಬಗ್ಗೆ ವಿದ್ವಾಂಸರ ಜೊತೆ ಚರ್ಚೆ, ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನ ರೂಪುರೇಷೆ, ೭೫ ವರ್ಷ ಮೀರಿರುವ ಬ್ಯಾರಿ ಹಿರಿಯರ ಮನೆಗೆ ಹೋಗಿ ಅವರ ಮನೆಯ ಅಂಗಳದಲ್ಲಿ ಅವರ ಜೊತೆ ಮಾತುಕತೆ ನಡೆಸಿ ಅವರ ಅನುಭವದ ದಾಖಲೀಕರಣ ಮಾಡುವುದು, ಮಂಗಳೂರಿನ ಆಕಾಶವಾಣಿಯಲ್ಲಿ ವಾರಕ್ಕೆ ಒಂದು ಬಾರಿಯಾದರೂ ಬ್ಯಾರಿ ವಾರ್ತೆ ಪ್ರಸಾರಕ್ಕಾಗಿ ಹಾಗೂ ತಿಂಗಳಿಗೊಮ್ಮೆಯಾದರೂ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಾರ ಮಾಡುವ ಬಗ್ಗೆ ಕ್ರಮ, ಆತೂರು ಮತ್ತು ಉಳ್ಳಾಲದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ, ಬ್ಯಾರಿ ಗೌರವ ಪ್ರಶಸ್ತಿ ವಿಜೇತರೊಂದಿಗೆ ಸಾಹಿತ್ಯ ಕೂಟ, ಬೆಂಗಳೂರಿನಲ್ಲಿ ಎಲ್ಲಾ ಅಕಾಡೆಮಿಗಳ ಕೂಡುವಿಕೆಯಿಂದ ವಸಂತ ಸಂಭ್ರಮ ಕೂಟ, ವಿಧಾನಸೌಧದಲ್ಲಿ ರಾಜ್ಯ ಮಾತೃ ಭಾಷಾ ನೀತಿಯ ಬಗ್ಗೆ ಅಭಿಪ್ರಾಯ ಮಂಡನೆ ಹೀಗೆ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಿಂದ ನಡೆಸಿದ್ದೇವೆ. ಬ್ಯಾರಿ ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ೮೦೦ ಬ್ಯಾರಿ ಜಮಾಅತ್ ಗಳಿಗೆ ಪತ್ರ ಕೂಡಾ ಬರೆದಿದ್ದೇವೆ. ದಿನಾಂಕ ೩-೧೦-೨೦೧೪ರಂದು ಬ್ಯಾರಿ ಭಾಷಾ ದಿನಾಚರಣೆ ಕೂಡಾ ನಡೆಯಲಿಕ್ಕಿದೆ. ಇನ್ ಶಾ ಅಲ್ಲಾಹ್.
ಇನ್ನೂ ತುಂಬಾ ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಸಲು ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಇರಲಿ, ನಿಮ್ಮ ಅಭಿಪ್ರಾಯ ಬರೆದು ಕಳುಹಿಸಿ.
ಬಿ.ಎ. ಮುಹಮ್ಮದ್ ಹನೀಫ್
|
ಎಲ್ಲಾ ಬ್ಯಾರಿ ಭಾಂಧವರಿಗೆ ಪ್ರೀತಿಯ ಅಸ್ಸಲಾಮ್ ಅಲೈಕುಮ್. ಬ್ಯಾರಿಯೇತರರಿಗೆ ಆತ್ಮೀಯ ನಮಸ್ಕಾರಗಳು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ದಿನಾಂಕ: ೦೬-೦೨-೨೦೧೨ ರಂದು ಅಧಿಕಾರ ಸ್ವೀಕಾರ ಮಾಡಿದ್ದೇನೆ. ನಾನು ನಿರ್ದಿಷ್ಟ ರಾಜಕೀಯ ಪಕ್ಷವೊಂದರಲ್ಲಿ ಪದಾಧಿಕಾರಿಯಾಗಿದ್ದರೂ ಅಕಾಡೆಮಿಯಲ್ಲಿ ಎಂದೂ ರಾಜಕೀಯ ನುಸುಳಲು ಬಿಡುವುದಿಲ್ಲ ಎಂದು ಪ್ರಾರಂಭದಲ್ಲಿಯೇ ಭರವಸೆ ನೀಡಿದ್ದೆ. ಅದರಂತೆ ನಡೆದಿದ್ದೇನೆ ಎಂಬ ಸಂತೋಷ ನನಗಿದೆ. ಆರಂಭದಲ್ಲಿ ಅಕಾಡೆಮಿ ಯಾವ ರೀತಿಯಲ್ಲಿ ಮುಂದುವರಿಯಬೇಕು ಎಂಬ ವಿಚಾರದಲ್ಲಿ ಬ್ಯಾರಿ ಸಮುದಾಯದ ಪ್ರಮುಖರ ಸಭೆ ಕರೆದು ಅಭಿಪ್ರಾಯ ಸಂಗ್ರಹ ಮಾಡಿದ್ದೆ. ಹಲವಾರು ಮಂದಿ ನನಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಇನ್ನು ಕೆಲವರು ನನ್ನ ಬಗ್ಗೆ ಹಲವಾರು ಅಪಪ್ರಚಾರಗಳನ್ನು ಹರಡಿಸಿದ್ದರು. ಕೆಲವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಕೆಲವರು ಟೀಕೆಯನ್ನು ಮಾಡುತ್ತಾ ಬಂದರು. ಆದರೆ ಇದು ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಲ್ಲಾಹನು ನೀಡಿದ ಅಧಿಕಾರವನ್ನು ದುರುಪಯೋಗಪಡಿಸಿದರೆ ನಾಳೆಯ ದಿನ ಉತ್ತರ ನೀಡಬೇಕಾಗುತ್ತದೆ ಎಂಬ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡು ಬಂದಿದ್ದೇನೆ. ನಾನು ಅಧ್ಯಕ್ಷನಾದ ಬಳಿಕ ಅಕಾಡೆಮಿಯ ಸದಸ್ಯರ ಸಹಕಾರದಲ್ಲಿ –
೧. ಬ್ಯಾರಿ ಅಕಾಡೆಮಿ ಮುನ್ನೊಲುಗು (ಮಂಗಳೂರು) ೨. ನೋಂಬುಲೊರು ಸಾಹಿತ್ಯ ಮೋಂದಿ (ಕುಂದಾಪುರ) ೩. ಪೆರ್ನಾಲ್ ಸಂದೋಲ (ಮಂಗಳೂರು ಪುರಭವನದಲ್ಲಿ) ೪. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೫. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೬. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮಂಗಳೂರು ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೫. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೮. ೨೦೧೧ರ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ (ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ) ೯. ಬೆಲಿಯೆ ಪೆರ್ನಾಲ್ ಸಂದೋಲ ಕಲಾಸ್ಪರ್ದೆ (ಪುತ್ತೂರಿನ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಬಡ ಮಕ್ಕಳೊಂದಿಗೆ) ೧೦. ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಸೌಹಾರ್ದ ಮೇಳ (ಮೈಸೂರಿನಲ್ಲಿ) ೧೧. ೫. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಮೈಸೂರು ಜಿಲ್ಲೆಯ ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೧೨. ಬ್ಯಾರಿ ಸಾಹಿತ್ಯತ್ತ್ ಲ್ ಒರ್ಮಪ್ಪಾಡ್ ಪಿರ್ಸಪ್ಪಾಡ್ (ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ) ೧೩. ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್ (ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ) ೧೪. ಈದ್ ಮಿಲನ್ ಪ್ರತಿಭಾ ಸೌಹಾರ್ದ ಸಂದೇಶೋತ್ಸವ ( ಗುಲ್ವಾಡಿ ಉಡುಪಿ ಜಿಲ್ಲೆ) ೧೫. ರಾಜ್ಯ ಮಟ್ಟ ದ ದಫ್ ಹಾಗೂ ಸಾಂಸ್ಕೃತಿಕ ಉತ್ಸವ ( ಹಯಾತುಲ್ ಇಸ್ಲಾಂ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಗೂಡಿನ ಬಳಿಯಲ್ಲಿ) ….. ಈಗೆ ಹತ್ತು ಹಲವಾರು ಕಾರ್ಯಕ್ರಮ ನೀಡಿ ಬ್ಯಾರಿ ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಹಳ್ಳಿ-ಹಳ್ಳಿಗೆ ಕೊಂಡೊಯ್ದು ಪ್ರಚಾರ ನಡೆಸಿದ್ದೇನೆ. ಹಲವಾರು ಕಲಾವಿದರಿಗೆ ಪ್ರೊತ್ಸಾಹ ನೀಡಿದ್ದೇನೆ. ಬ್ಯಾರಿ ಜನಾಂಗದ ಶ್ರೀಮಂತ ಕಲೆಯಾದ ದಫ್, ಒಪ್ಪನ, ಕೋಲ್ಕಲಿ, ಮೊÊಲಾಂಜಿ ಹಾಡು, ಬ್ಯಾರಿ ಜನಪದ ಗೀತೆಗಳು, ಬ್ಯಾರಿ ಬುರ್ದಾ ಹೀಗೆ ಹತ್ತು ಹಲವಾರು ಬ್ಯಾರಿ ಸಾಂಸ್ಕೃತಿಕ ಕಲೆಗಳನ್ನು ಇತರರಿಗೆ ಪರಿಚಯಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದೇನೆ.
ಇದು ಅಕಾಡೆಮಿಯ ಮೂಲ ಉದ್ದೇಶವಾದರೂ ಇದರಿಂದ ನಾನು ಸಂತೃಪ್ತನಾಗಿಲ್ಲ. ಇದೀಗ ಮೂವತ್ತು ಲಕ್ಷದಷ್ಟಿರುವ ಬ್ಯಾರಿ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಸಮಗ್ರ ಬ್ಯಾರಿಗಳ ಹಿತವನ್ನು ಕಾಯುವ ಬ್ಯಾರಿಗಳ ಮಾಹಿತಿ ಕೇಂದ್ರದಂತೆ ಕಾರ್ಯಾಚರಿಸುವ ಬ್ಯಾರಿ ಭವನ ಇದರ ನಿರ್ಮಾಣದ ಕನಸನ್ನು ಕಂಡಿದ್ದೇನೆ. ಇದಕ್ಕಾಗಿ ಸೂಕ್ತ ನಿವೇಶನ ಗುರುತಿಸಿ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಸಮಸ್ತ ಬ್ಯಾರಿಗಳ ಕನಸು ನನಸಾಗಲಿದೆ.
ಸುಮಾರು ಹದಿನಾರಿ ಸಾವಿರ ಸಬ್ದಗಳನ್ನೊಳಗೊಂಡ ಬ್ಯಾರಿ ಕನ್ನಡ-ಮಳಯಾಲ-ಇಂಗ್ಲಿಷ್ ನಿಘಂಟನ್ನು (ಡಿಕ್ಷನರಿ) ಹೊರತರಬೇಕೆಂಬ ಪ್ರಯತ್ನದಲ್ಲಿದೇನೆ. ಇನ್ಸಾ ಅಲ್ಲಾಹ್ ಮುಂದಿನ ೩-೪ ತಿಂಗಳಲ್ಲಿ ಈ ಕಾರ್ಯ ಪೂರ್ತಿಯಾಗಬಹುದೆಂದು ಭಾವಿಸುತ್ತೇನೆ.
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಬ್ಯಾರಿ ಗತವೈಭವವನ್ನು ಮುಂದಿನ ಪೀಳಿಗೆಗೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ಯಾರಿ ಭಾಷೆಗೆ ಮಾನ್ಯತೆ ಲಭಿಸಲು ಸಹಕಾರಿಯಾಗುತ್ತದೆ. ವಿಶ್ವದ ವಿವಿಧ ಬ್ಯಾರಿ ಸಂಘಟನೆಗಳ ಮುಖ್ಯಸ್ಥರನ್ನು ಒಂದೆಡೆ ಸೇರಿಸಿ ವಿಶ್ವ ಬ್ಯಾರಿ ಸಮ್ಮೇಳನವನ್ನು ನಡೆಸುವ ಚಿಂತನೆ ಅಕಾಡೆಮಿಯಿಂದ ನಡೆದಿದೆ. ಇದಕ್ಕಾಗಿ ಇಲಾಖೆಯಿಂದ ಅನುಮತಿಯನ್ನು ಕೇಳಿ ಪತ್ರವನ್ನು ಬರೆಯಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆಯೂ ಅಕಾಡೆಮಿಯ ಕೆಲಸ ಸುಸೂತ್ರವಾಗಿ ನಡೆಸಲು ಸತತ ಪ್ರಯತ್ನ ನಡೆಸುತ್ತಿದ್ದೇನೆ.
ಅಕಾಡೆಮಿಯ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರಾದ ಶ್ರೀ ಸಿ.ಟಿ. ರವಿ, ಶ್ರೀ ಎ.ರಾಮದಾಸ್, ಶಾಸಕರುಗಳಾದ ಶ್ರೀ ರಮಾನಾಥ ರೈ, ಶ್ರೀ ಕೃಷ್ಣ ಜೆ. ಪಾಲೆಮಾರ್, ಶ್ರೀ ಎನ್.ಎ. ಯೋಗೀಶ್ ಭಟ್, ಜನಾಬ್ ಯು.ಟಿ. ಖಾದರ್, ಶ್ರೀ ಅಭಯಚಂದ್ರ ಜೈನ್, ಶ್ರೀ ಮುಖ್ಯಮಂತ್ರಿ ಚಂದ್ರು, ಜನಾಬ್ ಎನ್.ಎ. ಹ್ಯಾರಿಸ್, ಶ್ರೀ ಹೆಚ್.ಕೆ. ಕುಮಾರಸ್ವಾಮಿ ಮುಂತಾದ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.
ಸಾರ್ವಜನಿಕ ಅಥವಾ ಸರ್ಕಾರಿ ಕಾರ್ಯಕ್ರಮಗಳ ವೇದಿಕೆ ಎಂದರೆ ದೂರ ಸಾಗುವ ಗೌರವಾನ್ವಿತ ಅಲ್ ಫಝಲ್ ಕೋಯಮ್ಮ ಕೂರತ್ ತಂYಳ್, ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಕೆ.ಕೆ. ಸುಲೈಮಾನ್ ಫೈಝಿ, ಮೌಲಾನಾ ಶಾಪಿ ಸಅದಿ, ಮಾಣಿ ಉಸ್ತಾದ್ ಮುಂತಾದವರು ಅಕಾಡೆಮಿಯ ವೇದಿಕೆಯಲ್ಲಿ ಭಾಗವಹಿಸಿ ನಮಗಾಗಿ ದುಆ ಆಶೀರ್ವಾದ ನೀಡಿರುವ ಆ ಕ್ಷಣ ನನ್ನ ಪಾಲಿಗೆ ಮುಖ್ಯ ಎಂದೆನಿಸಿದೆ. ಭೇದ ಭಾವ ತೋರದೆ ಮುಸ್ಲಿಂ ಸಮಾಜದ ವಿವಿಧ ಪಂಗಡಕ್ಕೆ ಸೇರಿದ ಆಲಿಮ್ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಆಶೀರ್ವಾದ ಪಡೆದಿದ್ದೇನೆ.
ನನ್ನ ಬಗ್ಗೆ ಕಳೆದ ಕೆಲವು ತಿಂಗಳ ಹಿಂದೆ ನಡೆದ ಅಪಪ್ರಚಾರದಿಂದಾಗಿ ನನ್ನ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆಯಿತು. ಕೊಲ್ಲುವವನಿಗಿಂತ ಆಯುಷ್ಯ ನೀಡಿದ ಅಲ್ಲಾಹನ ಕಲ್ಪನೆಯೇ ಬೇರೆಯಾಗಿತ್ತು. ಇದು ಅಲ್ಲಾಹನು ನನಗೆ ನೀಡಿದ ಮರುಜನ್ಮ ಎಂದು ಬಗೆಯುತ್ತೇನೆ. ಕಳೆದ ಕೆಲವು ತಿಂಗಳಿಂದ ಎಲ್ಲಾ ವಿವಾದಗಳಿಂದ ದೂರವಾಗಿದ್ದೇನೆ. ಪ್ರಾಮಾಣಿಕವಾಗಿ ಸಮುದಾಯದ ಸೇವೆಯನ್ನು ಮಾಡುತ್ತಿದ್ದೇನೆ. ನನ್ನನ್ನು ದ್ವೇಷಿಸುತ್ತಿದ್ದವರು ಪ್ರೀತಿಸಲು ಆರಂಭಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಕರ್ತರಾದ ಸೃಷ್ಟಿಕರ್ತನನ್ನು ಸಾವಿರಾರು ಬಾರಿ ಸ್ತುತಿಸುತ್ತೇನೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಮಸ್ತ ಬ್ಯಾರಿ ಬಾಂಧವರ ಸೊತ್ತು. ಇದರಲ್ಲಿ ಅಧ್ಯಕ್ಷ ಸ್ಥಾನವೆಂಬುದು ನೆಪಮಾತ್ರ. ಸಮಸ್ತ ಬ್ಯಾರಿಗಳು ಸಲಹೆ ಸೂಚನೆ ಪತ್ರಗಳನ್ನು ಬರೆದು ನಮ್ಮ ಸರಿ ತಪ್ಪುಗಳನ್ನು ತಿಳಿಸಬೇಕು ಹಾಗೂ ನಮಗೆ ಮಾರ್ಗದರ್ಶನ ನೀಡಬೇಕು. ನನ ದೀರ್ಘಾಯುಷ್ಯಕ್ಕಾಗಿ ತಾವು ದುಆ ಮಾಡಬೇಕೆಂದು ಸಮಸ್ತ ಬ್ಯಾರಿಗಳಲ್ಲಿ ಮನವಿ ಮಾಡುತ್ತಾ ಸದಾ ನಿಮ್ಮವನಾಗಿ ಇರುತ್ತೇನೆ ಎಂಬ ಆಸಯವನ್ನು ವ್ಯಕ್ತಪಡಿಸುತ್ತಾ.
ನಿಮ್ಮ ಪ್ರೀತಿಯ ಸಹೋದರ ರಹೀಂ ಉಚ್ಚಿಲ್
|
ಕರ್ನಾಟಕ ಕರಾವಳಿ ಬ್ಯಾರಿಗಳ ಉಗಮ ಸ್ಥಾನ. ಮಂಗಳೂರು ಬ್ಯಾರಿಗಳ ರಾಜಧಾನಿ. ಇಂದು ಜಗತ್ತಿನಾದ್ಯಂತ ಸುಮಾರು 15 ಲಕ್ಷಕ್ಕೂ ಮಿಕ್ಕಿ ಬ್ಯಾರಿಗಳಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಉದ್ಯೋಗ, ವ್ಯಾಪಾರ, ಉದ್ಯಮ ಅರಸಿಕೊಂಡು ಹೋಗಿ ಅಲ್ಲಿಯೇ ನೆಲೆಸಿರುವ ಬಹಳಷ್ಟು ಬ್ಯಾರಿಗಳು ಇಂದು ರಾಜ್ಯ, ದೇಶದ ಮೂಲೆ ಮೂಲೆಗಳಲ್ಲೂ ಇದ್ದಾರೆ. ವಿದೇಶಗಳಲ್ಲೂ ಬಹುಸಂಖ್ಯೆಯಲ್ಲಿದ್ದಾರೆ. ಆದರೂ ಅವರು ತಮ್ಮ ತಾಯ್ನೆಲವನ್ನು ಮರೆತಿಲ್ಲ. ಬ್ಯಾರಿಗಳ ಮುಖ್ಯ ಕಸುಬು ವ್ಯಾಪಾರ. ಹೆಚ್ಚಾಗಿ ಗಂಡಸರೇ ದುಡಿಯುತ್ತಾರೆ. ಹೆಂಗಸರು ಮನೆವಾರ್ತೆ ನೋಡಿಕೊಳ್ಳುತ್ತಾರೆ. ಅವರು ದುಡಿಯಲು ಹೋಗುವುದು ವಿರಳ. ಸುಮಾರು 20 ವರ್ಷಗಳ ಹಿಂದಿನ ಮಾತು. ಕರ್ನಾಟಕ ಕರಾವಳಿಯಿಂದ ಉದ್ಯೋಗ, ವ್ಯಾಪಾರಕ್ಕೆಂದು ಬೆಂಗಳೂರು ಸೇರಿದ ಬ್ಯಾರಿಗಳು ಅಲ್ಲಿಯೇ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಎಂಬ ಸಂಸ್ಥೆಯೊಂದನ್ನು ಕಟ್ಟಿಕೊಂಡರು. ಬ್ಯಾರಿಗಳ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. 1997ರಲ್ಲಿ ಈ ಸಂಸ್ಥೆಯ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ 2 ದಿನಗಳ ‘ಬ್ಯಾರಿ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಯಿತು. ಬಹಳ ವಿಜೃಂಭನೆಯಿಂದ ನಡೆದ ಈ ಸಮ್ಮೇಳನವು ಸಂಪೂರ್ಣ ಯಶಸ್ವಿಯಾಯಿತು. ಮಾತ್ರವಲ್ಲ ಈ ಸಮ್ಮೇಳನವೇ ಬ್ಯಾರಿ ಆಂದೋಲನಕ್ಕೆ ನಾಂದಿಯಾಯಿತು. ಬೆಂಗಳೂರು ಸಮ್ಮೇಳನದಲ್ಲಿ ಭಾಗವಹಿಸಿದ ಮಂಗಳೂರಿನ ಕೆಲವು ಕವಿಗಳು, ಸಾಹಿತಿಗಳು ಹಾಗೂ ಕಲಾವಿದರು `ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ’ ಎಂಬ ಸಂಸ್ಥೆಯೊಂದನ್ನು ಮಂಗಳೂರಿನಲ್ಲಿ ಹುಟ್ಟು ಹಾಕಿದರು. ಆ ಸಂಘದ ಮೂಲಕ ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಾ ರಾಜ್ಯದ ಮೂಲೆ - ಮೂಲೆ ಸಂಚರಿಸಿದರು. ಬ್ಯಾರಿಗಳನ್ನು ಸಾಂಸ್ಕೃತಿಕವಾಗಿ ಸಂಘಟಿಸಿದರು. 1998ರಲ್ಲಿ ಮಂಗಳೂರು ಪುರಭವನದಲ್ಲಿ ’ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನ’ವನ್ನು ನಡೆಸಿದರು. ಈ ಐತಿಹಾಸಿಕ ಸಮ್ಮೇಳನ ಬ್ಯಾರಿಗಳ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಬ್ಯಾರಿ ಎಂದು ಗುರುತಿಸಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಿದ್ದ ಬ್ಯಾರಿಗಳು ಅಂದಿನಿಂದ ’ನಾನು ಬ್ಯಾರಿ’ ಎಂದು ಹೆಮ್ಮೆಯಿಂದ ಹೇಳತೊಡಗಿದರು. ಈ ಸಮ್ಮೇಳನದ ಸ್ವಾಗತ ಸಮಿತಿಯನ್ನೇ `ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್’ ಎಂದು ನಾಮಕರಣ ಮಾಡಿ ಹೊಸ ಸಂಘಟನೆಯೊಂದನ್ನು ಸ್ಥಾಪಿಸಿ ಆ ಮೂಲಕ ಬಂಟ್ವಾಳದಲ್ಲಿ ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ಉಡುಪಿಯಲ್ಲಿ ಮೂರನೇ ಸಾಹಿತ್ಯ ಸಮ್ಮೇಳನ ಹಾಗೂ ಚಿಕ್ಕಮಗಳೂರಿನಲ್ಲಿ ಅಲ್ಲಿಯ ಬ್ಯಾರಿಗಳ ಒಕ್ಕೂಟದ ಸಹಯೋಗದೊಂದಿಗೆ ನಾಲ್ಕನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಯಿತು. ಪ್ರತಿಯೊಂದು ಸಮ್ಮೇಳನದಲ್ಲಿಯೂ ಸರಕಾರದೊಂದಿಗೆ ಬ್ಯಾರಿಗಳ ಮುಖ್ಯ ಬೇಡಿಕೆ `ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡೆಮಿ ಕೊಡಿ’ ಎಂಬುದಾಗಿತ್ತು. 12 ವರ್ಷಗಳ ಸತತ ಹೋರಾಟದ ಫಲವಾಗಿ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಕುಮಾರಸ್ವಾಮಿ ನೇತೃತ್ವದ ಅಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಬ್ಯಾರಿಗಳಿಗೆ ’ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ’ಯನ್ನು ಘೋಷಿಸಿತು. ನಂತರ ಬಂದ ಯಡಿಯೂರಪ್ಪ ಸರಕಾರ ಫೆಬ್ರವರಿ 5, 2009 ರಂದು ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ನೇಮಿಸಿ ಅಕಾಡೆಮಿಗೆ ಚಾಲನೆ ನೀಡಿತು. ಪ್ರಾರಂಭದಲ್ಲಿ ಅಕಾಡೆಮಿಗೆ ಕಚೇರಿ ಇರಲಿಲ್ಲ. ಸಿಬ್ಬಂದಿಗಳಿರಲಿಲ್ಲ. ಕೆಲವು ತಿಂಗಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಚಾವಡಿಯಲ್ಲಿ ಒಂದು ಕುರ್ಚಿ ಹಾಗೂ ಮೇಜು ಇಟ್ಟು ಕಾರ್ಯ ನಿರ್ವಹಿಸಿದ ಅಕಾಡೆಮಿ 6 ತಿಂಗಳೊಳಗೆ ಅಕಾಡೆಮಿಗೆ ಸ್ವಂತ ಕಚೇರಿಯನ್ನು ಸ್ಥಾಪಿಸಿ, ಸಿಬ್ಬಂದಿಗಳನ್ನು ನೇಮಿಸಿಕೊಂಡಿತು. ಅನಂತರ ಕಾರ್ಯಕ್ರಮ ಹಮ್ಮಿಕೊಳ್ಳ ತೊಡಗಿದ ಅಕಾಡೆಮಿ ಮತ್ತೆ ಹಿಂದಿರುಗಿ ನೋಡಲಿಲ್ಲ. ನಗರ, ಹಳ್ಳಿಗಳಲ್ಲದೆ ಬೆಂಗಳೂರು, ಮುಂಬೈಯಂತಹ ಮಹಾನಗರಗಳಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿತು. ಮೈಸೂರು, ಗೋವಾ ಮಾತ್ರವಲ್ಲ ಎಲ್ಲೆಲ್ಲಿ ಬ್ಯಾರಿಗಳು ನೆಲೆಸಿದ್ದಾರೊ ಅಲ್ಲೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಒಂದು ವರ್ಷ ಬ್ಯಾರಿಗಳನ್ನು ಸಾಂಸ್ಕೃತಿಕವಾಗಿ ಸಂಘಟಿಸುವುದರಲ್ಲಿಯೇ ಕಳೆದ ಅಕಾಡೆಮಿ ಈಗ ಸಾಹಿತ್ಯದತ್ತ ದೃಷ್ಟಿನೆಟ್ಟಿದೆ. ಈ ವರ್ಷಾಂತ್ಯದೊಳಗೆ ಕನಿಷ್ಠ 10 ಬ್ಯಾರಿ ಕೃತಿಗಳನ್ನಾದರೂ ಪ್ರಕಟಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈಗಾಗಲೇ ಪ್ರಕಟಣೆಗಾಗಿ ಅಕಾಡೆಮಿಗೆ ಹಲವಾರು ಹಸ್ತಪ್ರತಿಗಳು ಬಂದಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಅಕಾಡೆಮಿ ಸುಮಾರು 20 ರಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿಗೆ ಸಮಸ್ತ ಬ್ಯಾರಿ ಸಮುದಾಯದ ಸಂಪೂರ್ಣ ಸಹಕಾರ ಹಾಗೂ ರಿಜಿಸ್ಟ್ರಾರ್ ಮತ್ತು ಸರ್ವ ಸದಸ್ಯರ ಅವಿಶ್ರಿತ ಶ್ರಮವೇ ಕಾರಣ. ನಮ್ಮ ಕಾರ್ಯಕ್ರಮವನ್ನು ಕಂಡು ದ.ಕ. ಜಿಲ್ಲಾ ಉಸ್ತುವರಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್ ಮಂಗಳೂರು ಪುರಭವನದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಲು ಇಷ್ಟ ಪಡುತ್ತೇನೆ. ``ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬಹಳ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವರು ನಡೆಸುವ ಕಾರ್ಯಕ್ರಮಕ್ಕೆ ಬಹಳಷ್ಟು ಜನ ಸೇರುತ್ತಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬೇರೆಲ್ಲ ಅಕಾಡೆಮಿಗೆ ಮಾದರಿಯಾಗಿದೆ.’' ಬ್ಯಾರಿ ಸಮುದಾಯವನ್ನು ಸಾಹಿತ್ಯವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ಸಾಗಿಸಲು, ಬ್ಯಾರಿ ಭಾಷೆಯನ್ನು ಉಳಿಸಿ ಬೆಳೆಸಲು ಸರಕಾರ ನಮಗೆ ಈ ಅಕಾಡೆಮಿಯನ್ನು ನೀಡಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಸಮುದಾಯಕ್ಕೆ ಮುಟ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಹಾಗೆಯೇ ಇದನ್ನು ಪಡೆಯಲು ಸಮುದಾಯ ಕೂಡಾ ಮುಂದೆ ಬರಬೇಕಿದೆ.
ಎಂ ಬಿ ಅಬ್ದುಲ್ ರಹಿಮಾನ್
|